ग्रन्थपरिचयः

ಶ್ರೀವಿಷ್ಣುತತ್ತ್ವವಿನಿರ್ಣಯ ಶ್ರೀಜಯತೀರ್ಥ ವಿರಚಿತ ಟೀಕೆಯೊಂದಿಗೆ – ಕನ್ನಡಾನುವಾದ

by Vidwan Bidrahalli Krishnacharya · 2024 · ಕನ್ನಡ

ಕನ್ನಡ

ಶ್ರೀವಿಷ್ಣುತತ್ತ್ವವಿನಿರ್ಣಯ ಶ್ರೀಜಯತೀರ್ಥ ವಿರಚಿತ ಟೀಕೆಯೊಂದಿಗೆ – ಕನ್ನಡಾನುವಾದ

by Vidwan Bidrahalli Krishnacharya

(5.0 · 6000 reviews) In Stock
ಜಗದ್ಗುರುಗಳಾದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ರಚಿಸಿದ ಹತ್ತು ಪ್ರಕರಣಗ್ರಂಥಗಳಲ್ಲಿ ಶ್ರೀವಿಷ್ಣುತತ್ತ್ವವಿನಿರ್ಣಯವು ಅತ್ಯಂತ ಮಹತ್ವದ ಗ್ರಂಥವಾಗಿದೆ. ಸಾಮಾನ್ಯವಾಗಿ ಒಂದು ಅಥವಾ ಎರಡು ಪ್ರಮೇಯಗಳನ್ನು ನಿರೂಪಿಸುವ ಗ್ರಂಥವನ್ನು ಪ್ರಕರಣಗ್ರಂಥವೆಂದು ಕರೆಯಲಾಗುತ್ತದೆ. ಆದರೆ ಈ ಗ್ರಂಥದಲ್ಲಿ ದ್ವೈತವೇದಾಂತದ ಅನೇಕ…

Pages

788

Language

Kannada

Publisher

Sri Vyasatirtha Samshodhana Prathisthanam

Edition

First

Binding

case binding

₹ 600

Inclusive of all taxes

1

About this book

ಜಗದ್ಗುರುಗಳಾದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ರಚಿಸಿದ ಹತ್ತು ಪ್ರಕರಣಗ್ರಂಥಗಳಲ್ಲಿ ಶ್ರೀವಿಷ್ಣುತತ್ತ್ವವಿನಿರ್ಣಯವು ಅತ್ಯಂತ ಮಹತ್ವದ ಗ್ರಂಥವಾಗಿದೆ. ಸಾಮಾನ್ಯವಾಗಿ ಒಂದು ಅಥವಾ ಎರಡು ಪ್ರಮೇಯಗಳನ್ನು ನಿರೂಪಿಸುವ ಗ್ರಂಥವನ್ನು ಪ್ರಕರಣಗ್ರಂಥವೆಂದು ಕರೆಯಲಾಗುತ್ತದೆ. ಆದರೆ ಈ ಗ್ರಂಥದಲ್ಲಿ ದ್ವೈತವೇದಾಂತದ ಅನೇಕ ಮೂಲಭೂತ ತತ್ತ್ವಗಳನ್ನು ವಿಶದವಾಗಿ ನಿರೂಪಿಸಲಾಗಿದೆ.

ಈ ಗ್ರಂಥಕ್ಕೆ ಟೀಕಾಚಾರ್ಯರೆಂದೇ ಪ್ರಸಿದ್ಧರಾದ ಶ್ರೀಜಯತೀರ್ಥ ಮುನೀಂದ್ರರು ವಿಸ್ತೃತ ಹಾಗೂ ಗಂಭೀರವಾದ ಟೀಕೆಯನ್ನು ರಚಿಸಿದ್ದಾರೆ. ಪಂಡಿತರು ಈ ಗ್ರಂಥವನ್ನು ಶ್ರೀಮನ್ನ್ಯಾಯಸುಧೆಯ ನಂತರದ ಸ್ಥಾನದಲ್ಲಿರುವ ಗ್ರಂಥವೆಂದು ಪರಿಗಣಿಸುವುದರಿಂದ ಇದನ್ನು “ಅಣುಸುಧಾ” ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ಗ್ರಂಥದ ಹೆಸರೇ ಸೂಚಿಸುವಂತೆ, ವಿಷ್ಣುತತ್ತ್ವವಿನಿರ್ಣಯದಲ್ಲಿ ಶ್ರೀವಿಷ್ಣುವೇ ಸಕಲ ಆಗಮಗಳಿಂದ ಪ್ರತಿಪಾದ್ಯನಾದ ಪರಮಾತ್ಮ, ವೇದಗಳ ಮುಖ್ಯ ಪ್ರತಿಪಾದ್ಯವಸ್ತು, ಸಮಸ್ತ ಜಗತ್ತಿಗಿಂತ ಅನಂತ ಶ್ರೇಷ್ಠನು, ಹಾಗೂ ಸಕಲ ದೋಷಗಳಿಂದ ಸರ್ವಥಾ ದೂರನಾದ ಶ್ರೀನಾರಾಯಣನು ಎಂಬ ಸಿದ್ಧಾಂತಗಳನ್ನು ದೃಢವಾಗಿ ಪ್ರತಿಪಾದಿಸಲಾಗಿದೆ. ಇದರೊಂದಿಗೆ ಪ್ರಾಭಾಕರ, ಬೌದ್ಧ, ಜೈನ, ನ್ಯಾಯ, ವೈಶೇಷಿಕ ಮೊದಲಾದ ದರ್ಶನಗಳ ತಾತ್ತ್ವಿಕ ವಿಮರ್ಶೆಯನ್ನೂ ಅತ್ಯಂತ ಯುಕ್ತಿಪೂರ್ಣವಾಗಿ ನಿರೂಪಿಸಲಾಗಿದೆ.

ಈ ಟೀಕೆಯಲ್ಲಿರುವ ಪ್ರಮುಖ ಚರ್ಚೆಗಳಲ್ಲಿ ಒಂದಾದ — “ಬುದ್ಧ, ಜಿನ ಮುಂತಾದ ಮಹಾಪುರುಷರ ವಚನಗಳಿಂದಲೇ ಧರ್ಮವನ್ನು ನಿರ್ಣಯಿಸಬಹುದಾದಾಗ ಅಪೌರುಷೇಯ ವೇದಗಳ ಅಗತ್ಯವೇನು?” — ಎಂಬ ಪ್ರಶ್ನೆಗೆ ಶ್ರೀಜಯತೀರ್ಥರು ನೀಡಿರುವ ಉತ್ತರ ಅತ್ಯಂತ ಮನೋಜ್ಞವಾಗಿದೆ. ಮಾನವರಲ್ಲಿ ಅಜ್ಞಾನ, ಪ್ರಮಾದ ಹಾಗೂ ಮೋಸಗಾರಿಕೆ ಮುಂತಾದ ದೋಷಗಳು ಸಾಮಾನ್ಯವಾಗಿರುವುದರಿಂದ ಅವರ ವಚನಗಳು ಪರಮಪ್ರಮಾಣವಾಗಲಾರವು; ದೋಷರಹಿತವಾದ ಅಪೌರುಷೇಯ ವೇದಗಳೇ ಧರ್ಮನಿರ್ಣಯಕ್ಕೆ ಅಂತಿಮ ಪ್ರಮಾಣವೆಂದು ಅವರು ಸುಸ್ಪಷ್ಟವಾಗಿ ನಿರೂಪಿಸಿದ್ದಾರೆ.

ಯುಕ್ತಿಪೂರ್ಣ ವಾದಮಾಲೆ, ಸುಸಂಘಟಿತ ವಾಕ್ಯರಚನೆ, ಪರಶಾಸ್ತ್ರಗಳ ಸಮಗ್ರ ವಿಮರ್ಶೆ, ಆಚಾರ್ಯರ ತಾತ್ಪರ್ಯದ ಸುಲಭ ನಿರೂಪಣೆ ಹಾಗೂ ಗಂಭೀರ ತಾತ್ತ್ವಿಕ ವಿಚಾರಗಳ ಸ್ಪಷ್ಟೀಕರಣಗಳಿಂದ ಈ ಟೀಕೆಯು ಅಲಂಕರಿಸಲ್ಪಟ್ಟಿದೆ. ದ್ವೈತವೇದಾಂತದ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ವಿದ್ವಾಂಸರಿಗೆ ಇದು ಅಪೂರ್ವ ಮಾರ್ಗದರ್ಶಕ ಗ್ರಂಥವಾಗಿದೆ.

ಸಂಪಾದಕರು : ವಿದ್ವಾನ್ ಕೃಷ್ಣಾಚಾರ್ಯ ಬಿದರಹಳ್ಳಿ

ವಿದ್ವಾನ್ ಕೃಷ್ಣಾಚಾರ್ಯ ಬಿದರಹಳ್ಳಿಯವರು ನಾಡಿನ ಪ್ರಸಿದ್ಧ ಗುರುಕುಲವಾದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಸಾಂಪ್ರದಾಯಿಕ ಶಾಸ್ತ್ರಾಧ್ಯಯನವನ್ನು ನಡೆಸಿದ್ದಾರೆ. ಈ ಶತಮಾನದ ಮಹಾನ್ ಯತಿವರ್ಯರಾದ ಪರಮಪೂಜ್ಯ ಶ್ರೀಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಸನ್ನಿಧಿಯಲ್ಲಿ ಶ್ರೀಮನ್ನ್ಯಾಯಸುಧೆಯನ್ನು ಅಧ್ಯಯನ ಮಾಡಿ ಅವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.

ಪಾಠ, ಪ್ರವಚನ, ಗ್ರಂಥರಚನೆ ಹಾಗೂ ಸಂಸ್ಕೃತ ಗ್ರಂಥಗಳ ಕನ್ನಡಾನುವಾದದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಇವರು ದ್ವೈತವೇದಾಂತ ಸಾಹಿತ್ಯದ ಪ್ರಸಾರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ.

ಇವರು ಪ್ರಸಿದ್ಧ ಟಿಪ್ಪಣಿಕಾರರಾದ ಬಿದರಹಳ್ಳಿ ಶ್ರೀನಿವಾಸತೀರ್ಥರ ವಿದ್ವತ್ಪರಂಪರೆಗೆ ಸೇರಿದವರಾಗಿದ್ದಾರೆ. ಇವರ ತಂದೆಯಾದ ಬಿದರಹಳ್ಳಿ ಶ್ರೀನಿವಾಸಾಚಾರ್ಯರು ಶ್ರೇಷ್ಠ ವಿದ್ವಾಂಸರು ಹಾಗೂ ಆದರ್ಶ ಆಚಾರಶೀಲರಾಗಿದ್ದು, ಬಾಲ್ಯದಲ್ಲಿಯೇ ಇವರಿಗೆ ಶಾಸ್ತ್ರಗಳ ಪ್ರಾಥಮಿಕ ಶಿಕ್ಷಣವನ್ನು ನೀಡಿದರು.

ಅನೇಕ ಪ್ರಾಚೀನ ಟಿಪ್ಪಣಿಗಳು ಹಾಗೂ ಪ್ರಮಾಣಗ್ರಂಥಗಳನ್ನು ಸಮಗ್ರವಾಗಿ ಪರಿಶೀಲಿಸಿ, ಶ್ರೀಜಯತೀರ್ಥರ ಟೀಕೆಯ ತಾತ್ಪರ್ಯವನ್ನು ಅಧ್ಯೇತೃಗಳಿಗೆ ಸುಲಭವಾಗಿ ಮನದಟ್ಟಾಗುವಂತೆ ಕನ್ನಡದಲ್ಲಿ ಸ್ಪಷ್ಟ, ಸರಳ ಹಾಗೂ ಶಾಸ್ತ್ರೀಯವಾಗಿ ಅನುವಾದಿಸಿರುವುದು ಈ ಆವೃತ್ತಿಯ ವಿಶೇಷತೆಯಾಗಿದೆ.